ಬೆಂಗಳೂರು: ಪ್ರತಿಭೆ ವಿಶ್ವವ್ಯಾಪಿಯಾಗಿದ್ದರೂ ಅವಕಾಶಗಳು ಎಲ್ಲರಿಗೂ ಸಮಾನವಾಗಿ ಲಭ್ಯವಾಗುತ್ತಿಲ್ಲ. ಈ ಅಂತರವನ್ನು ಉತ್ತಮ ನೀತಿಗಳು ಮತ್ತು ಪರಿಣಾಮಕಾರಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ತುಂಬುವ ಅಗತ್ಯವಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಅಜಯ್ ಸಿಂಗ್ ರವರು ಹೇಳಿದರು.
ಬೆಂಗಳೂರು ಇಂದು ಸುಮಾರು 67,000 ನೋಂದಾಯಿತ ಐಟಿ ಮತ್ತು ಟೆಕ್ ಕಂಪನಿಗಳ ತವರೂರಾಗಿದೆ. ನಗರದ ಐಟಿ ಮತ್ತು ತಂತ್ರಜ್ಞಾನ ವಲಯವು ನೇರ ಹಾಗೂ ಪರೋಕ್ಷವಾಗಿ ಸುಮಾರು 10 ಲಕ್ಷದಿಂದ 25 ಲಕ್ಷ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಈ ಬಲವನ್ನು ರಾಜ್ಯದ ಕೌಶಲ್ಯಾಭಿವೃದ್ಧಿ ಮತ್ತು ಶಿಕ್ಷಣ ವ್ಯವಸ್ಥೆಯೊಂದಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಜೋಡಿಸುವ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕದ ಶಿಕ್ಷಣ ಸಂಸ್ಥೆಗಳು ಕೇವಲ ಉದಯೋನ್ಮುಖ ತಂತ್ರಜ್ಞಾನಗಳನ್ನು ಬೋಧಿಸುವ ಕೇಂದ್ರಗಳಾಗಿರದೆ, ಅವುಗಳ ಪರೀಕ್ಷಾ ಶಿಬಿರಗಳಾಗಬೇಕು. ವಿದ್ಯಾರ್ಥಿಗಳು ಎಂಎಸ್ಎಂಇಗಳು, ರೈತರು, ಸಾರ್ವಜನಿಕ ಸೇವೆಗಳು ಮತ್ತು ಸ್ಥಳೀಯ ಸಮುದಾಯಗಳು ಎದುರಿಸುತ್ತಿರುವ ನೈಜ ಸಮಸ್ಯೆಗಳ ಪರಿಹಾರಕ್ಕಾಗಿ ತಂತ್ರಜ್ಞಾನವನ್ನು ಬಳಸುವಂತಾಗಬೇಕು ಎಂದುಆಶಯ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸುವ ಪರಿಹಾರಗಳು ಅಲ್ಲಿಯೇ ಸೀಮಿತವಾಗದೆ, ಕಾರ್ಖಾನೆಗಳು, ಸ್ಟಾರ್ಟ್ಅಪ್ಗಳು ಹಾಗೂ ಸರ್ಕಾರಿ ಯೋಜನೆಗಳವರೆಗೆ ತಲುಪುವಂತಾಗಬೇಕು. ಅಂತಹ ಪರಿಹಾರಗಳೇ ಸಮಾಜಕ್ಕೆ ಪ್ರಯೋಜನವನ್ನು ತಂದುಕೊಡಬಲ್ಲವು ಎಂದು ತಿಳಿಸಿದರು.
ಇದೇ ವೇಳೆ, ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ನೀಡಲಾಗುತ್ತಿರುವ ಉತ್ಕೃಷ್ಟ ಪ್ರಶಸ್ತಿಗಳು ಕೇವಲ ಸಾಧನೆಗೆ ನೀಡುವ ಗೌರವವಾಗಿರದೆ, ಕೌಶಲ್ಯಾಭಿವೃದ್ಧಿಯನ್ನು ಅನುಸರಣೆಯ ಕರ್ತವ್ಯವಾಗಿ ನೋಡದೆ, ದೀರ್ಘಕಾಲೀನ ಬದ್ಧತೆಯಾಗಿ ಮುನ್ನಡೆಸುತ್ತಿರುವ ಕಾರ್ಪೊರೇಟ್ ಸಂಸ್ಥೆಗಳು, ಎಂಎಸ್ಎಂಇಗಳು, ಪಿಎಸ್ಯುಗಳು, ಸ್ಟಾರ್ಟ್ಅಪ್ಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಗುರುತಿಸುವ ಮಹತ್ವದ ವೇದಿಕೆಯಾಗಿವೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಸಂಸ್ಥೆಗಳು ತಮ್ಮ ಯಶಸ್ವಿ ಮಾದರಿಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು, ಮತ್ತೊಂದು ಸಂಸ್ಥೆಗೆ ಮಾರ್ಗದರ್ಶನ ನೀಡಬೇಕು ಹಾಗೂ ಯುವಜನರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯಬೇಕು ಇತರ ಸಂಸ್ಥೆಗಳು ಅನುಸರಿಸಬಹುದಾದ ಬಲವಾದ ಮಾನದಂಡವನ್ನು ಸ್ಥಾಪಿಸುವುದು ಇಂತಹ ಪ್ರಶಸ್ತಿಗಳ ನಿಜವಾದ ಉದ್ದೇಶವಾಗಿದೆ ಎಂದು ಹೇಳಿದರು.
ಸಮಾವೇಶದ ಯಶಸ್ಸನ್ನು ಕೇವಲ ಹಾಜರಿದ್ದವರ ಸಂಖ್ಯೆಯಿಂದ ಅಳೆಯಲಾಗದು. ನಾಳೆಯ ಕರ್ನಾಟಕವನ್ನು ಕೇವಲ ತಂತ್ರಜ್ಞಾನದಿಂದ ನಿರ್ಮಿಸಲಾಗುವುದಿಲ್ಲ ತಂತ್ರಜ್ಞಾನವನ್ನು ನೈಪುಣ್ಯ, ಕಲ್ಪನೆ ಮತ್ತು ಉದ್ದೇಶದೊಂದಿಗೆ ಬಳಸಬಲ್ಲ ಜನರ ಮೂಲಕವೇ ನಿರ್ಮಿಸಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಸಮಾವೇಶವು ಕೌಶಲ್ಯವಂತರಾದ, ಸಮಾವೇಶಾತ್ಮಕ, ಹೊಸತನಕ್ಕೆ ತೆರೆದಿರುವ ಹಾಗೂ ಜಾಗತಿಕವಾಗಿ ಮುನ್ನಡೆಸಲು ಸಿದ್ಧವಾಗಿರುವ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗಿ ಕೈಜೋಡಿಸೋಣ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀ ಎಫ್ ಆರ್ ಸಿಂಘ್ವಿ, ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಸನಸೇರಾ ಇಂಜಿನಿಯರಿಂಗ್ ಪ್ರೈ ಲಿ., ಡಾ ಇ ವಿ ರಮಣ ರೆಡ್ಡಿ,, ಭಾ ಆ ಸೇ, (ನಿ), ಛೇರ್ಮನ್, ಕರ್ನಾಟಕ ಸ್ಕಿಲ್ ಡೆವಲಂಪ್ ಮೆಂಟ್ ಆಥಾರಿಟಿ,, ಶ್ರೀ, ಟಿ ಸಾಯಿರಾಂ ಪ್ರಸಾದ, ಚುನಾಯಿತ ಅಧ್ಯಕ್ಷ, ಶ್ರೀ ಬಿ ಪಿ ಶಶಿಧರ್, ಚುನಾಯಿತ ಹಿರಿಯ ಉಪಾಧ್ಯಕ್ಷ, ಕೌಶಲ್ಯಾಭಿವೃದ್ಧಿ ಸಮಿತಿ ಛೇರ್ಮನ್ ಶ್ರೀಮತಿ ತೇಜಶ್ರೀ, ಮಾಜಿ ಅಧ್ಯಕ್ಷರು ಹಾಗೂ ಕೌಶಲ್ಯಾಭಿವೃದ್ಧಿ ಸಮಿತಿ ಸಲಹೆಗಾರರಾದ ಡಾ ಜೆ ಕ್ರಾಸ್ಟಾ ಇತರ ಗಣ್ಯರು ಭಾಗವಹಿಸಿದ್ದರು.





























































