Home Bengaluru ಜೂ. 20ಕ್ಕೆ ಆದಿಚುಂಚನಗಿರಿ ವಿವಿ ಬೆಂಗಳೂರು ಕ್ಯಾಂಪಸ್ ಉದ್ಘಾಟನೆ

ಜೂ. 20ಕ್ಕೆ ಆದಿಚುಂಚನಗಿರಿ ವಿವಿ ಬೆಂಗಳೂರು ಕ್ಯಾಂಪಸ್ ಉದ್ಘಾಟನೆ

- ನಗರೂರಿನ ಬಿಜಿಎಸ್ ಎಂಸಿಎಚ್ ಆವರಣದಲ್ಲಿ ನೂತನ ಕ್ಯಾಂಪಸ್ ಉದ್ಘಾಟಿಸಲಿರುವ ಕೇಂದ್ರ ಸಚಿವ ಅಮಿತ್ ಶಾ - ಎಲ್ಲರಿಗೂ ಆರೋಗ್ಯ ನೀಡಲು ಬಿಜಿಎಸ್ ಆಸ್ಪತ್ರೆ ಮತ್ತು ವೈದ್ಯ ಕಾಲೇಜು ಬದ್ಧ: ಉಪಕುಲಪತಿ ಡಾ.ಎಂ.ಎ.ಶೇಖರ್

0

ಬೆಂಗಳೂರು, ಜೂ. 18: ಮಂಡ್ಯ ಜಿಲ್ಲೆ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯವು ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ವಿಶ್ವ ವಿದ್ಯಾಲಯದ ಕ್ಯಾಂಪಸ್ ಆರಂಭಿಸುತ್ತಿದೆ.

ನಗರೂರಿನಲ್ಲಿರುವ ಬಿಜಿಎಸ್ ಎಂಸಿಎಚ್ ಆವರಣದಲ್ಲಿ ಆದಿಚುಚನಗಿರಿ ವಿಶ್ವವಿದ್ಯಾಲಯ ಹಾಗೂ ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಜೂ.20ರ ಶುಕ್ರವಾರ ಉದ್ಘಾಟಿಸಲಾಗುತ್ತಿದೆ. ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿರುವ ಆದಿಚುಂಚನಗಿರಿ ಮಠದ ಪೀಠಾದ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ ಕೋಠ್ ನ ಅರ್ಶ ವಿದ್ಯಾ ಮಂದಿರದ ಜಗದ್ಗುರು ಸ್ವಾಮಿ ಪರಮಾತ್ಮಾನಂದ ಸ್ವಾಮೀಜಿ, ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮಜಿ ಅವರ ಸಾನ್ನಿಧ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿವಿ ಕ್ಯಾಂಪಸ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎ. ಶೇಖರ್ ಅವರು, “ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ವಿಧಾನಸಭ ಪ್ರತಿಪಕ್ಷದ ನಾಯಕ ಆರ್.ಅಶೋಕ, ಸಂಸದ ಡಾ.ಕೆ.ಸುಧಾಕರ್, ಶಾಸಕರಾದ ಎಸ್.ಆರ್.ವಿಶ್ವನಾಥ್, ಎನ್.ಶ್ರೀನಿವಾಸಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ,” ಎಂದರು.

ಬಿಜಿಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ (ಬಿಜಿಎಸ್-ಎಂಸಿಎಚ್) ಕುರಿತು ಮಾಹಿತಿ ನೀಡಿದ ಅವರು, ” ಇದು ನ್ಯಾಕ್ ನಿಂದ ಎ+ ಮಾನ್ಯತೆ ಪಡೆದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಪ್ರಮುಖ ಘಟಕವಾಗಿದೆ. 2024-2025 ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಶಿಕ್ಷಣ, ರೋಗಿಗಳ ಆರೈಕೆ ಮತ್ತು ಸಮುದಾಯದ ಆರೋಗ್ಯ ತಲುಪುವಿಕೆಯಲ್ಲಿ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದೆ,” ಎಂದು ಹೇಳಿದರು.

“ಬಿಜಿಎಸ್ ವಿವಿ ಕ್ಯಾಂಪಸ್ ನಲ್ಲಿ ಬಿಜಿಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ (150 ಎಂಬಿಬಿಎಸ್ ವಿದ್ಯಾರ್ಥಿಗಳು), ವಿಜ್ಞಾಥಮ್ ಇನ್ಸ್ ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ (250 ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳು), ವಿಜ್ಞಾಥಮ್ ಇನ್ಸಿಟ್ಯೂಟ್ ಆಫ್ ಫಿಸಿಯೋಥೆರಪಿ (60 ವಿದ್ಯಾರ್ಥಿಗಳು) ಹಾಗೂ ವಿಜ್ಞಾಥಮ್ ಇನ್ಸಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ (80 ವಿದ್ಯಾರ್ಥಿಗಳು) ಕಾರ್ಯನಿರ್ವಹಿಸುತ್ತಿವೆ. 

ಈ ಸಂಸ್ಥೆಗಳು ಬಹು-ಶ್ರೇಣಿಯ, ಪ್ರಾಯೋಗಿಕ ತರಬೇತಿಯನ್ನು ಒದಗಿಸುವುದಲ್ಲದೆ ಸಮುದಾಯದ ಸೇವೆಯನ್ನು ಆರೋಗ್ಯ ಶಿಕ್ಷಣದ ಮೂಲಭೂತ ಮೌಲ್ಯವಾಗಿ ಅಳವಡಿಸಿಕೊಂಡಿವೆ,” ಎಂದು ಮಾಹಿತಿ ನೀಡಿದರು.

“ಬಿಜಿಎಸ್ ಎಂಸಿಎಚ್ 630 ಹಾಸಿಗೆಗಳ ಆಸ್ಪತ್ರೆಯಿಂದ 930 ಹಾಸಿಗೆಗಳ ಬಹು-ವಿಶೇಷ ಆಸ್ಪತ್ರೆಯಾಗಿ ವಿಸ್ತರಣೆಯಾಗಿದ್ದು, ಉನ್ನತ ಮಟ್ಟದ ಮಾಡ್ಯುಲರ್ ಆಪರೇಶನ್ ಥಿಯೇಟರ್‌ಗಳು, ವಿಶೇಷ ತೀವ್ರ ನಿಗಾ ಘಟಕ, 24/7 ತುರ್ತು, ಟ್ರಾಮಾ ಮತ್ತು ರಕ್ತ ನಿಧಿ ಕೇಂದ್ರ ಸೇವೆಗಳ, ಅತ್ಯಾಧುನಿಕ ರೇಡಿಯೋಲಾಜಿಕಲ್ ಇಮೇಜಿಂಗ್ ಮತ್ತು ಡಯಾಗೋಸ್ಟಿಕ್ ಲ್ಯಾಬೊರೇಟರಿಗಳು, ಸಂಪೂರ್ಣ ಸೂಪರ್-ಸ್ಪೆಷಾಲಿಟಿ ಸೇವೆಗಳನ್ನು ಒದಗಿಸುತ್ತಿದೆ,” ಎಂದು ಹೇಳಿದರು.

“ಬಿಜಿಎಸ್- ಎಂಸಿಎಚ್  ಕೈಗೆಟುಕುವ ಮಾಸ್ಟರ್ ಹೆಲ್ತ್ ಚೆಕ್-ಅಪ್ ಪ್ಯಾಕೇಜ್‌ಗಳನ್ನು ನೀಡುತ್ತಿದ್ದು, ಇದು 20 ಕ್ಕೂ ಹೆಚ್ಚು ಅಗತ್ಯ ಡಯಾಗೋಸ್ಟಿಕ್ ಪರೀಕ್ಷೆಗಳನ್ನು ಒಳಗೊಂಡಿದೆ. 10,000 ಕ್ಕೂ ಹೆಚ್ಚು ರೋಗಿಗಳಿಗಳು ಇದರ ಲಾಭ ಪಡೆದುಕೊಂಡಿದ್ದಾರೆ. ಈ ಪ್ಯಾಕೇಜ್‌ಗಳು ಉನ್ನತ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತವೆ. ಅಲ್ಲದೆ, ನಮ್ಮ ಸಮಾನ ಆರೋಗ್ಯ ಸೇವೆಯು ಸಂಸ್ಥೆಯ ಮೂಲ ಧೈಯವನ್ನು ಪ್ರತಿಬಿಂಬಿಸುತ್ತವೆ,” ಎಂದು ತಿಳಿಸಿದರು.

*ರೋಗಿಗಳಿಗೆ ಉಚಿತ ಸಲಹೆ ಚಿಕಿತ್ಸೆ*:

“ನೆಲಮಂಗಲದಲ್ಲಿ ಸಂಪೂರ್ಣ ಕಾರ್ಯನಿರ್ವಹಣೆಯಲ್ಲಿರುವ ಕ್ಲಿನಿಕ್ ಈಗಾಗಲೇ ರೋಗಿಗಳಿಗೆ ಉಚಿತ ಸಲಹೆ ಮತ್ತು ಚಿಕಿತ್ಸೆಗಳನ್ನು ನೀಡುತ್ತಿದೆ. ಇದೀಗ ಸೋಲೂರು, ಮಾದನಾಯಕನಹಳ್ಳಿ ಮತ್ತು ಜಾಲಹಳ್ಳಿಯ ಕ್ಲಿನಿಕ್‌ಗಳ ವಿಸ್ತರಣೆ ಪ್ರಗತಿಯಲ್ಲಿದೆ. ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸಮಾನತೆಯನ್ನು ತರಲು, ಅಬ್ಬಿಗೇರಿ (ನಗರ) ಮತ್ತು ಗೋಪಾಲಪುರ (ಗ್ರಾಮ) ಎಂಬ ಎರಡು ಸ್ಥಳಗಳಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಸ್ಥೆಯು ದತ್ತು ಪಡೆದಿದೆ,” ಎಂದರು.

“ಕಡಿಮೆ ಸಂಪತ್ತು ಹೊಂದಿರುವ ಪ್ರದೇಶಗಳ ಜನರಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಬಿಜಿಎಸ್-ಎಂಸಿಎಚ್ ನ 30 ಕಿ.ಮೀ.ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಹಲವು ವಿಶಿಷ್ಟ ವೈದ್ಯಕೀಯ ಶಿಬಿರಗಳು, 10 ಕ್ಕೂ ಹೆಚ್ಚು ನೇತ್ರಚಿಕಿತ್ಸಾ ಶಿಬಿರಗಳನ್ನು  ನಡೆಸಲಾಗುತ್ತಿದೆ. ಈ ಮೂಲಕ ಸಾವಿರಾರು ರೋಗಿಗಳನ್ನು ತಪಾಸಣೆ ಮಾಡಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಬಿಜಿಎಸ್-ಎಂಸಿಎಚ್ ನಲ್ಲಿ ಸಂಪೂರ್ಣ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದು ಸಂಸ್ಥೆಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ,” ಎಂದು ತಿಳಿಸಿದರು.

“ಸಮುದಾಯ ವೈದ್ಯಕೀಯ ವಿಭಾಗದಡಿ ಕುಟುಂಬ ದತ್ತು ಕಾರ್ಯಕ್ರಮದಿಂದ (FAP) ಸಮೀಪದ ಗ್ರಾಮಗಳ (ದಾಸನಪುರ, ನಾಗರೂರು, ನಾಗರೂರು ಕಾಲೋನಿ ಮತ್ತು ಪಿಲ್ಲಹಳ್ಳಿ) 450 ಕುಟುಂಬಗಳನ್ನು ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಕುಟುಂಬದ ವೈದ್ಯರಾಗಿಯೂ ಕಾರ್ಯನಿರ್ವಹಿಸುತ್ತಾ ಗ್ರಾಮಸ್ಥರಿಗೆ ರೋಗ ತಡೆಗಟ್ಟುವ ಮುಂಜಾಗ್ರತ ಕ್ರಮ ಹಾಗೂ ಆರೈಕೆ ಮತ್ತು ಕಡಿಮೆ ದರದಲ್ಲಿ ಚಿಕಿತ್ಸೆಯನ್ನು ನೀಡುವ ಮೂಲಕ ಗ್ರಾಮೀಣ ಆರೋಗ್ಯ ಸೇವೆಗೆ ಶಾಶ್ವತ ಮಾದರಿಯನ್ನು ರೂಪಿಸುತ್ತಿದ್ದಾರೆ,” ಎಂದು ಹೇಳಿದರು.

*ಡಿಜಿಟಲ್ ಆರೋಗ್ಯ ಶಿಕ್ಷಣದಲ್ಲಿ ಮುಂಚೂಣಿ*:

“ಡಿಜಿಟಲ್ ಸಾರ್ವಜನಿಕ ಆರೋಗ್ಯ ಶಿಕ್ಷಣದಲ್ಲಿ ಬಿಜಿಎಸ್-ಎಂಸಿಎಚ್ ಮುಂಚೂಣಿಯಲ್ಲಿದೆ. ನಮ್ಮ ಆರೋಗ್ಯವಾಣಿ ಪಾಡ್‌ಕಾಸ್ಟ್‌ನಿಂದ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಆರೋಗ್ಯ ಜಾಗೃತಿಯನ್ನು ಒದಗಿಲಾಗುತ್ತಿದೆ. ಈ ಸಂಸ್ಥೆಯ ಯುಟ್ಯೂಬ್ ಚಾನೆಲ್ 1,85,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದು, ಸುಲಭವಾಗಿ ಲಭ್ಯವಿರುವ ವೈದ್ಯಕೀಯ ವಿಷಯಗಳನ್ನು ಹಂಚಿಕೊಳ್ಳುತ್ತದೆ. ಇದು ಕರ್ನಾಟಕ ಮತ್ರವಲ್ಲದೆ, ನೆರೆಹೊರೆಯ ಭಾಗಗಳ ವಿಶ್ವಾಸಾರ್ಹ ಆರೋಗ್ಯ ಮಾಹಿತಿಯ ಮೂಲವಾಗಿದೆ.” ಎಂದರು.

“ಬಿಜಿಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತನ್ನ ಗುರಿಯತ್ತ ದೃಢವಾಗಿ ಮುಂದುವರಿಯುತ್ತಿದ್ದು, ಸಾಮಾಜಿಕ ಕಾಳಜಿ, ಕೈಗೆಟುಕುವ ಮತ್ತು ಸಮುದಾಯ ಕೇಂದ್ರಿತ ಆರೋಗ್ಯ ಸೇವೆಯನ್ನು ಒದಗಿಸುವ ಜೊತೆಗೆ ಮುಂದಿನ ತಲೆಮಾರಿನ ವೈದ್ಯಕೀಯ ವೃತ್ತಿಪರರನ್ನು ರೂಪಿಸುತ್ತಿದೆ. ಆ ಮೂಲಕ ಎಲ್ಲರಿಗೂ ಆರೋಗ್ಯ ಎಂಬ ಘೋಷವಾಕ್ಯವನ್ನು ಅನಷ್ಠಾನಕ್ಕೆ ತರುತ್ತಿದೆ,” ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಸಿಎಲ್ ಪಿಸಿ ವಿಭಾಗದ ಮಖ್ಯಸ್ಥ ಮಾಧವ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Previous articleBeautyXperience 2025 Debuts in Style at Phoenix Mall of Asia, Bengaluru
Next articleThe RCB In Collaboration with Deputy Consul General of Israel – state-of-the-art

LEAVE A REPLY

Please enter your comment!
Please enter your name here