Home Business ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅನಂತ್ ಕುಮಾರ್ ಪರಿಶ್ರಮ ಮರೆಯಲು ಸಾಧ್ಯವೇ ಇಲ್ಲ : ಬಿ.ವೈ....

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅನಂತ್ ಕುಮಾರ್ ಪರಿಶ್ರಮ ಮರೆಯಲು ಸಾಧ್ಯವೇ ಇಲ್ಲ : ಬಿ.ವೈ. ವಿಜಯೇಂದ್ರ

0

ಬೆಂಗಳೂರು, ನ, 13: ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಹಿರಿಯ ರಾಜಕೀಯ ಮುತ್ಸದ್ದಿ ಅನಂತ್ ಕುಮಾರ್. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅನಂತ್ ಕುಮಾರ್ ಅವರ ಪರಿಶ್ರಮವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಲಾಲ್ ಬಾಗ್ ವೆಸ್ಟ್ಗೇಟ್ ನಿಂದ ಅದಮ್ಯಚೇತನದವರೆಗೆ ಆಯೋಜಿಸಿದ್ದ 4 ನೇ “ಅನಂತ ಸ್ಮೃತಿ” ನಡಿಗೆ ಮತ್ತು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರು ಪಕ್ಷದ ಸಂಘಟನೆ ಬಗ್ಗೆ ಸದಾ ಕಾಲ ಚರ್ಚಿಸುತ್ತಿದ್ದರು. ರಾಜ್ಯದಲ್ಲಿ ಪಕ್ಷ ಸಂಘಟನೆ ಬಲಿಷ್ಠಗೊಳ್ಳಲು ಈ ಇಬ್ಬರೂ ನಾಯಕರ ಪರಿಶ್ರಮ ಅನನ್ಯ ಎಂದರು.

ಇವರ ನಡುವೆ ಅವಿನಾಭಾವ ಸಂಬಂಧವಿತ್ತು. ಬೆಂಗಳೂರಿನ ಶಾಂತಿನಗರ ನಿವಾಸದಲ್ಲಿ ಹಗಲಿರುಳು ಜನಪರ ವಿಚಾರಗಳ ಕುರಿತು ಚರ್ಚಿಸುತ್ತಿದ್ದರು. ಅನಂತ್ ಕುಮಾರ್ ಅವರು ಮನೆಗೆ ಬಂದ ಸಂದರ್ಭದಲ್ಲಿ ಯಡಿಯೂರಪ್ಪ ತಮ್ಮ ಅಧಿಕೃತ ಪ್ರವಾಸ, ಕಾರ್ಯಕ್ರಮಗಳನ್ನು ಮರೆಯುತ್ತಿದ್ದರು. ಇಲ್ಲವೆ ಮುಂದೂಡುತ್ತಿದ್ದರು. ಇಬ್ಬರೂ ಹಗಲಿರುಳು ಪಕ್ಷದ ಬೆಳವಣಿಗೆಯನ್ನೇ ಧ್ಯಾನಿಸುತ್ತಿದ್ದರು. ಬಿಜೆಪಿಗೆ ರಾಜ್ಯದಲ್ಲಿ ಭದ್ರ ಬುನಾದಿ ದೊರೆಯಲು ಈ ನಾಯಕರೇ ಕಾರಣ ಎಂದರು.

ತೇಜಸ್ವಿ ಅನಂತ್ ಕುಮಾರ್ ಅವರ ಕ್ರಿಯಾಶೀಲತೆ ಮಾದರಿಯಾಗಿದ್ದು, ಅವರು ಎಂದೂ ಮನೆಯಲ್ಲಿ ಸುಮ್ಮನೆ ಕುಳಿತರವರೇ ಅಲ್ಲ. ಅನಂತ್ ಕುಮಾರ್ ಅವರ ತಾಯಿ ಹೆಸರಿನಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅದಮ್ಯ ಚೇತನ ಸಂಸ್ಥೆಯನ್ನು ಸ್ಥಾಪಿಸಿ, ಹಸಿದವರಿಗೆ ಅನ್ನದಾಸೋಹದ ಸೇವೆ ಮಾಡುತ್ತಿದ್ದಾರೆ. ರಾಜಕಾರಣಿಗಳು ಪ್ರತಿಯೊಂದು ಸೇವೆಯಲ್ಲಿ ರಾಜಕೀಯ ಲಾಭ ನೋಡುತ್ತಾರೆ. ಆದರೆ ತೇಜಸ್ವಿನಿ ಅನಂತ್ ಕುಮಾರ್ ಅವರು ರಾಜಕೀಯ ಪ್ರತಿಫಲಾಪೇಕ್ಷೆಯಿಲ್ಲದೇ, ತನ್ನ ಸೇವೆ ಮೂಲಕ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ತೇಜಸ್ವಿನಿ ಅನಂತ್ ಕುಮಾರ್ ಮಾತನಾಡಿ, ಅನಂತ್ ಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾಗಿ ಬೆಂಗಳೂರಿಗೆ ಹೊಸ ಸ್ವರೂಪ, ಅಭಿವೃದ್ಧಿಗೆ ಹೊಸ ಬೆಳಕು ನೀಡಿದ್ದರು. ಅನಂತ ಕುಮಾರ್ ಅವರ ನೇತೃತ್ವ, ಅವರ ಕತೃತ್ವವನ್ನು ಸ್ಮರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ರಾಜ್ಯ ಬಿಜೆಪಿಗೆ ಬಿ.ವೈ. ವಿಜಯೇಂದ್ರ ನೂತನ ಸಾರಥಿಯಾಗಿದ್ದು, ಹೊಸ ಗಾಳಿ ಬೀಸುವಂತಾಗಿದ್ದು, ಬದಲಾವಣೆಗೆ ಇದು ನಾಂದಿಯಾಗಲಿದ್ದು, ಪಕ್ಷಕ್ಕೆ ಶಕ್ತಿ ಬೇಕಾಗಿತ್ತು ಎಂದರು. ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಬಯಸದ ತೇಜಸ್ವಿನಿ ಅನಂತ್ ಕುಮಾರ್, ಈ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಕೆ.ಸಿ. ರಾಮಮೂರ್ತಿ, ರವಿ ಸುಬ್ರಮಣ್ಯ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಪಿ.ವಿ. ಕೃಷ್ಣ ಭಟ್ ಮತ್ತಿರರರು ಉಪಸ್ಥಿತರಿದ್ದರು.

Previous article“ರಾಯರ ಸನ್ನಿಧಿಯಲ್ಲಿ ಯತಿಗಳ ಸಮಾಗಮ”
Next articleಗೋವರ್ಧನ ಪೂಜೆ ಮತ್ತು ದೀಪಾವಳಿ ಹಬ್ಬದ ವಿಶೇಷ ಆಚರಣೆ

LEAVE A REPLY

Please enter your comment!
Please enter your name here