ಬೆಂಗಳೂರು: ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಉತ್ಸವದ (ಜನ್ಮದಿನೋತ್ಸವ) ಅಂಗವಾಗಿ ಶ್ರೀ ಗುರುರಾಯರ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ ಮತ್ತು ವಿಶೇಷವಾಗಿ “ಲಕ್ಷ ಪುಷ್ಪಾರ್ಚನೆ”ಯನ್ನು ಅಷ್ಟೋತ್ತರ ಸಹಿತ ಪಾರಾಯಣದೊಂದಿಗೆ, ಮಠದ ಧರ್ಮಾಧಿಕಾರಿಗಳಾದ ಶ್ರೀ ಕೃಷ್ಣ ಗುಂಡಾಚಾರ್ಯರು ಮತ್ತು ಅರ್ಚಕರಾದ ರಾಮಚಂದ್ರಾಚಾರ್ಯ, ಕೃಷ್ಣಾಚಾರ್ಯ ವೃಂದದಿಂದ “ಪುಷ್ಪಾರ್ಚನೆ” ನೆರವೇರಿತು ಎಂದು ಶ್ರೀಮಠದ ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು.
ತದನಂತರ ಡಾ|| ವೆಂಕಟನರಸಿಂಹಾಚಾರ್ಯರಿಂದ “ಶ್ರೀ ರಾಘವೇಂದ್ರ ವಿಜಯ” ಪ್ರವಚನದ ಮಂಗಳ ಕಾರ್ಯಕ್ರಮದೊಂದಿಗೆ ಸ್ವರ್ಣ ಸಿಂಹಾಸನದಲ್ಲಿ ಶ್ರೀ ಪ್ರಹ್ಲಾದರಾಜರ ಮೂರ್ತಿಯನ್ನು ಇರಿಸಿ ಶ್ರೀಮಠದಿಂದ ಗುರು ಪಾದಪೂಜೆ, ಕನಕಾಭಿಷೇಕ ಮತ್ತು ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮವು ನೆರವೇರಿತು. ಸೇವಾ ಕರ್ತೃಗಳಿಗೆ ಮತ್ತು ಭಕ್ತರಿಗೆ ಸಂಕಲ್ಪವನ್ನು ಮಾಡಿಸಿ ಶೇಷವಸ್ತ್ರ ಶ್ರೀ ಗುರು ರಾಯರ ಪಾದುಕೆ, ಫಲ ಮಂತ್ರಾಕ್ಷತೆ ಪ್ರಸಾದ ರೂಪವಾಗಿ ಕೊಡಲಾಯಿತು. ಇದೇ ಸಂದರ್ಭದಲ್ಲಿ ರಾಯರ ಸನ್ನಿಧಿಗೆ ಆಗಮಿಸಿದ ಸುಮಾರು 20,000ಕ್ಕೂ ಮಿಗಿಲಾಗಿ ಭಕ್ತರಿಗೆ ವಿಶೇಷವಾಗಿ ಅನ್ನಸಂತರ್ಪಣೆಯ ಪ್ರಸಾದ ಕಾರ್ಯಕ್ರಮವು ಸ್ವಯಂಸೇವಕರ ಮತ್ತು ಸಿಬ್ಬಂದಿಗಳ ಸಹಕಾರದಿಂದ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನೆರವೇರಿತು. ಸೇವಾ ಕರ್ತೃಗಳು, ಭಕ್ತರು, ಗಣ್ಯರು, ತೀರ್ಥ ಪ್ರಸಾದ ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.